ಸಾರಿಗೆ ವೆಚ್ಚ ಏರಿಕೆ ಏಕೆ?
ಮಾನ್ಯರೇ,
ರಾಜ್ಯ ಸರ್ಕಾರದ ಪ್ರತಿಷ್ಠಿತ ಆದಾಯದ ಮೂಲವಾಗಿರುವ ಬಿಎಂಟಿಸಿಯು ಚುನಾವಣೆಯಲ್ಲಿ ಮತದಾನ ಮಾಡಿದಕ್ಕೆ ಪ್ರತಿಫಲವಾಗಿ ಮತದಾರರಿಗೆ ಬೆಲೆ ಹೆಚ್ಚಳದ ಕೊಡುಗೆಯನ್ನು ನೀಡಿದೆ. ಈ ವರ್ಷದಲ್ಲೇ ಶೇ.19 ಬೆಲೆ ಏರಿಕೆ ಮಾಡಿರುವುದು ಇತಿಹಾಸದಲ್ಲೇ ಪ್ರಥಮವೆನ್ನಬಹುದು. ಬೇರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿಯೇ ಸಾರಿಗೆ ಅಧಿಕವಾಗಿದೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಸರ್ಕಾರವು ಬೆಲೆ ಏರಿಕೆಗೆ ಕಚ್ಚಾ ತೈಲದ ಬೆಲೆ ಏರಿಕೆ, ಕಂಪನಿಯು 300 ಕೋಟಿಗಳ ನಷ್ಟದಲ್ಲಿ ನಡೆಯುತ್ತಿರುವ ಕಾರಣ ನೀಡಿದೆ. ನಷ್ಟದಲ್ಲಿರುವ ಇಲಾಖೆಯನ್ನು ಸರ್ಕಾರ ಏಕೆ ನಡೆಸುತ್ತಿದೆ ಅದನ್ನು ಖಾಸಗಿಯವರಿಗೆ ಏಕೆ ವಹಿಸಿಕೊಡಬಾರದು ಅಥವಾ ವಿದೇಶಿ ನೇರ ಬಂಡವಾಳಕ್ಕೆ ಏಕೆ ಅನುವು ಮಾಡಿಕೊಡಬಾರದು ಎನ್ನುವ ಪ್ರಶ್ನೆಗಳು ಬುದ್ದಿಜೀವಿಗಳ ಮನದಲ್ಲಿ ಮೂಡುತ್ತದೆ. ಯಾವುದೇ ಆದಾಯವಿಲ್ಲದಂತಹ ಸಾರಿಗೆ ಇಲಾಖೆಯನ್ನು ಪಾಪ ನಷ್ಟದಲ್ಲಿ ನಡೆಸುವ ಅಗತ್ಯವಾದರೂ ಏನು? ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
ಈ ಬೆಲೆ ಏರಿಕೆಯಿಂದ ಸಾಮಾನ್ಯ ವರ್ಗದವರಿಗೆ (ಮುಖ್ಯವಾಗಿ ಕೆಳವರ್ಗ) ಹೆಚ್ಚು ತೊಂದರೆಯಾಗಲಿದೆ. ದಿನಗೂಲಿ ಮಾಡಿ ಜೀವನ ನಿರ್ವಹಿಸುತ್ತಿರುವವರ ಪಾಡು ಹೇಳತೀರದು. ಸರ್ಕಾರ ಈ ಬೆಲೆ ಏರಿಕೆಯನ್ನು ಈಕೂಡಲೇ ಪರಿಷ್ಕರಿಸಬೇಕಾಗಿರುವುದು ಅನಿವಾರ್ಯವೆನ್ನಿಸುತ್ತದೆ.
- ಕೆ.ಟಿ.ಆರ್.